ಇಳಕಲ್ : ಸಮೀಪದ ಹಿರೇ ಓತಗೇರಿ ಗ್ರಾಮದಲ್ಲಿ ಮಹಾಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ 603ನೇ ಜಯಂತೋತ್ಸವ ಸಂಭ್ರಮದಿಂದ ಭಕ್ತಿ ಭಾವದಿಂದ ಅಪಾರ ಭಕ್ತರ ಸಮ್ಮುಖದಲ್ಲಿ ಜರುಗಿತು.
ಬೆಳಗ್ಗೆ ಮಲ್ಲಮ್ಮನವರ ಮೂರ್ತಿಗೆ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಗೋಪುರಕ್ಕೆ ಕಳಸಾರೋಹಣ ಕಾರ್ಯಕ್ರಮವು ಸಕಲ ವಾದ್ಯ ಮೇಳಗಳೊಂದಿಗೆ ಜರುಗಿತು. ನಂತರ ಮಲ್ಲಮ್ಮ ತಾಯಿಯವರ ಭಾವಚಿತ್ರದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳು ಹಾಗೂ ವಿವಿಧ ವಾದ್ಯ ಮೇಳಗಳೊಂದಿಗೆ, ಸಂಭ್ರಮದಿಂದ ಜರುಗಿತು. ಅಪರ ಸಂಖ್ಯೆಯಲ್ಲಿ ಮಹಿಳೆಯರು ಮೆರವಣಿಗೆಯುದ್ದಕ್ಕೂ ಕಳಸದೊಂದಿಗೆ ಭಾಗವಹಿಸಿ ಮಲ್ಲಮ್ಮ ತಾಯಿಯ ಆಶೀರ್ವಾದ ಪಡೆದರು.
ಭವ್ಯ ಮೆರವಣಿಗೆ ನಂತರ ದೇವಸ್ಥಾನದಲ್ಲಿ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಬಂದಂತಹ ಭಕ್ತಾದಿಗಳಿಗೆ ಬೂಂದಿ, ಚಪಾತಿ, ಅನ್ನ ಸಾರು ಖಡಕ್ ರೊಟ್ಟಿ ಹಿಗೇ ಉತ್ತರ ಕರ್ನಾಟಕದ ಶೈಲಿಯ ಊಟವನ್ನು ಸವಿದು ತಾಯಿಯ ಆಶೀರ್ವಾದ ಪಡೆದರು.
ಜಯಂತೋತ್ಸವ ಕಾರ್ಯಕ್ರಮದಲ್ಲಿ ಹಿರೇಓತಗೇರಿ ಗ್ರಾಮದ ಸಕಲಗುರುಹಿರಿಯರು, ಯುವ ಮಿತ್ರರು, ತಾಯಂದಿರು ತಮ್ಮ ಭಕ್ತಿ ಸೇವೆಯನ್ನ ಮಾಡಿದರು. ಸುತ್ತಮುತ್ತಲಿನ ಗ್ರಾಮದವರು ಸಹ ಆಗಮಿಸಿ ಜಯಂತೋತ್ಸವದಲ್ಲಿ ಪಾಲ್ಗೊಂಡರು.